Thursday, December 18, 2008

ಯಂತ್ರ

ಬೇಂದ್ರೆಯಂತೆ ಬೇಯಲೆಂದು
ನಾಡನುಡಿಯ ಕೇಳಲೆಂದು
ನಡೆನಡೆಯುತ ಬಂದೆನು

ಬಿಸಿಲ ಬೇಗೆ ಬಸ್ಸ ಹೊಗೆ
ಅಟ್ಟಹಾಸಿ ಕಾರ ವಿಕಾರ ನಗೆ
ಬೆಳಗು ಬೈಗಿನುದ್ದಕೂ ಬೈಕ ಭರಭರ
ಕೊರಳಿರದ ಕಂಠಗಳ ಭೀಕರ ಹೂಂಕಾರ

ತುಟಿಗಳಾಡುತಿದ್ದರೂ ಮಾತು ಕೇಳದಾದವು
ಹೊರಟ ದನಿಗಳಲ್ಲಲ್ಲೇ ತಾವು ಸತ್ತು ಬಿದ್ದವು
ಶ್ರವಣವಿಲ್ಲ ಶ್ರಾವಣವಿಲ್ಲ ಎಲ್ಲ ಒಣ ಒಣ
ಮಾತು ಮೂಕವಾಯಿತಲ್ಲ ಎಲ್ಲ ಭಣಭಣ

ಒಂದು ಚೂರು ಬೇಯಲಿಲ್ಲ
ಬಳಲಿ ಬೆಂಡಆದೆನು
ಅನುಭವದಭಾವದಲಿ
ಕನಲಿ ಕವನ ಕಾರಿದೆನು.

ಮುಂಬೈ ಮಾರಿ

ಮುಂಬೈಯ ಬಾತ ಬಾಯಿ
ಬಾಯ್ಮುಂದ ಮಾತ ಮಾಯಿ

"ತಾಜಿ"ನ ತಾಜಾ ತೇಜ
ಕೆಡುಕೀಗೆ ಒಡಕ ಗಾಜ
ಆ "ನಾರಿ ಮಾನ" ಮಾರಿ
"ತ್ರಿನೀತಿಗೆ" ಭೀತಿ ಬೀರಿ

ಇರುಳಿನಲಿ ನುಸುಳಿ ಅರಿಯು
ಗುರಿಯಿರದೆ ಗುಂಡಗರೆದು
ಅರಿವಿರದ ನರರ ಮೇಧ
ಅರಿವಳಿದು ತಿಳಿವು ಕಳೆದು

ಹೊರೆಯಣ್ಣ ನೆರೆಯ ಪಾಕ
ನೆರೆವಿಗೆಲಾ!"ವಂಗ"ಪಾಕ
ಪಾಕಿನ ಪಾಕ ಮಾಡಿ
ಕೈ-ಕಮಲ-ಕುಡುಗೋಲು ಕೂಡಿ?

ನರೇಂದ್ರನುಡಿಗಿಲ್ಲ ಖಬರು
ಅಚ್ಯುತ ಪಟ್ಟ-"ಪಟ್ಟಿ" ಪೊಗರು
ವಿಜಯವೇ ಹೇಮಂತರಿಗೆ?
ಅಶೋಕವೇ ಸಂದೀಪರಿಗೆ?

ಕಾದಿಹೆವು ಕಾದುವೆವು ಕೊರಗದಿರಿ
ಸಂಹರಿಸಿ ಮಡಿದರೂ ಮರುಗದಿರಿ
ಅಟ್ಟುವೆವು ಮೆಟ್ಟುವೆವು ನಾವು ಬಲವಂತ
ಆದರೀ, ಸರಕಾರೀ ಅಪಚಾರ ಬೇಡ ಭಗವಂತ!!!



Saturday, September 20, 2008

ಜೀವನ ಚಕ್ರ

ತಿರುಗುತಿದೆ ಜೀವನ ಚಕ್ರವೆನ್ನುವರು
ತಿರುಗಿಸಿದರೆ ತಿರುಗಿ ಬರುವವೇ ಅವೇ
ಆಳ ತಿಳಿಯದೋದಿದ ಹಾಳೆಗಳು
ನಾಳೆ ನೆನ್ನೆಗಳಾಗುವವೇ ಮರಳಿ
ಮರಳಿದರೆ ಮರಳುವವೇ ಹೇಳು ಮರುಳಾ.

Sunday, August 24, 2008

ರಾಜಕೀಯ

ಹೆಸರಿರುವ ಗುರಿಯರಿಯದ
ನಾಯಕನಡಿಗೆ
ಹೆಸರಿಲ್ಲದ ಗುರಿಯಿಲ್ಲದ
ಜನರ ಸೇರಿಸಿದರೆ
ಹುಟ್ಟುವ ಕ್ಷಣಿಕ ಪಾರ್ಟಿ ಚಿರಂಜೀವಿಯೆ?